ಕರ್ನಾಟಕದ ಗಡಿರೇಖೆಗಳು ಅನೇಕ ಐತಿಹಾಸಿಕ ಕಾರಣಗಳಿಂದ ಕೆಲವು ಬಾರಿ ಕುಗ್ಗಿದ್ದವು ಕೆಲವು ಬಾರಿ ಹಿಗ್ಗಿದ್ದವು. ಹಲವು ಕಾರಣಗಳಿಂದ ನೆರೆ ರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶವನ್ನು ಒಂದಾಗಿ ಬೆಸೆದು ಅಖಂಡ ಕರ್ನಾಟಕವಾಗಿ ಎರಕ ಹೊಯ್ಯಲು ಮಾಡಿದ ಪ್ರಯತ್ನವೇ ಕರ್ನಾಟಕ ಏಕೀಕರಣ ಚಳುವಳಿ. ಇದನ್ನು ರಚಿಸಿರುವ ಡಾ|| ಎಚ್. ಎಸ್. ಗೋಪಾಲರಾವ್ ವೃತ್ತಿಯಿಂದ ಇಂಜಿನಿಯರ್ ಪ್ರವೃತ್ತಿಯಿಂದ ಕರ್ನಾಟಕ ಇತಿಹಾಸ ಶಾಸನಗಳ ಸಂಶೋಧಕ ಅಲ್ಲದೆ ಇವರು ಹಲವು ಕಾದಂಬರಿಗಳನ್ನು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಈಗ ಸ್ವಯಂ ನಿವೃತ್ತಿ ಪಡೆದಿರುವ ಇವರು ಸಂಪೂರ್ಣವಾಗಿ ಶಾಸನಗಳ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾರೆ.