ಎಸ್ ಸುರೇಂದ್ರನಾಥ್ ಅವರ ಕಟ್ಟು ಕತೆಗಳು ಕಥಾಸಂಕಲನದ ಕುರಿತು ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ-ಸುರೇಂದ್ರನಾಥರು ಹಿಡಿದ ಹಾದಿ ತೀರ ಹೊಸದು ಮತ್ತು ಭಿನ್ನ. ಈ ಕತೆಗಳನ್ನು ಓದುತ್ತಿದ್ದಂತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಕತೆಗಳ ನೆನಪು ಸ್ವಲ್ಪ ಮಟ್ಟಿಗಾದರೂ ಆದೀತು. ಆದರೆ ಈ ನೆನಪು ಸುರೇಂದ್ರನಾಥರ ಕತೆಗಳ ಭಿನ್ನತೆಯನ್ನೇ ಎತ್ತಿ ತೋರಿಸುತ್ತದೆ. ಗೊರೂರರ ಹಾಸ್ಯದಲ್ಲಿ ಬದುಕಿನ ಬಗೆಗಿನ ಚಿಕ್ಕ ಪುಟ್ಟ ಐರನಿಗಳು ಪ್ರಕಟವಾದರೆ ಸುರೇಂದ್ರನಾಥರ ಕತೆಗಳ ಹಾಸ್ಯ ಅನಿರೀಕ್ಷಿತ ದುರಂತದಲ್ಲಿ ಎತ್ತಿ ಒಗೆದಂತೆ ದಿಗ್ಭ್ರಮೆಗೊಳಿಸುತ್ತದೆ. ಸುರೇಂದ್ರನಾಥರ ಕತೆಗಳಲ್ಲಿ ಕಾಣುವ ಕೇಂದ್ರ ವಿನ್ಯಾಸವೆಂದರೆ ಬದುಕಿನ ಗಂಭೀರ ಅನುಭವಗಳನ್ನು ಹಾಸ್ಯದ ಮೂಲಕ ಅತಿರೇಕಕ್ಕೆ ಒಯ್ದು ನೋಡುವದು ಮತ್ತು ಆ ಮೂಲಕ ಈವರೆಗೆ ಕಾಣದ ಹೊಸ ಅರ್ಥಗಳನ್ನು ಹೊಳೆಯಿಸುವುದು. ಈ ಪ್ರಯತ್ನದಲ್ಲಿ ಇವರು ಸಾಕಷ್ಟು ಯಶಸ್ವಿಯಾಗಿದ್ದು ಈ ಮೂಲಕ ಕನ್ನಡ ಸಣ್ಣಕತೆಗೆ ಹೊಸ ಸಾಧ್ಯತೆಯೊಂದನ್ನು ಜೋಡಿಸಿದ್ದಾರೆ.A kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ