ವಿಜ್ಞಾನಿಯೊಬ್ಬ ತನ್ನ ಸಂಶೋಧನಾ ಕ್ಷೇತ್ರದ ಮಾಹಿತಿಗಳನ್ನೇ ಥ್ರಿಲ್ ಕೊಡುವ ಕಥಾರೂಪದಲ್ಲಿ ಹೆಣೆಯುವುದು ಅಷ್ಟೇನೂ ಸವಾಲಿನ ಕೆಲಸವಾಗಿರಲಾರದು (ಕನ್ನಡದ ಮಟ್ಟಿಗೆ ಅದೂ ಇಲ್ಲ ಬಿಡಿ). ಇಲ್ಲಿ ಹಾಗಲ್ಲ. ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕವಾಗಿ ಹೆಣೆಯಲಾಗಿದೆ. ಇದು ಅಪರೂಪದ ಸಾಧನೆಯೇ ಸರಿ. ಅಲ್ಲಲ್ಲಿ ಕಡೆದಿಟ್ಟ ಕಲ್ಲುಗಳ ಅವಶೇಷಗಳಲ್ಲಿ ನಮ್ಮ ರೋಚಕ ಚರಿತ್ರೆಗಳು ಹೂತು ಹೋಗಿವೆ. ಇಲ್ಲವೆ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ಬುಕ್ಗಳಿಂದ ವಿದ್ಯಾರ್ಥಿಗಳ ನೋಟ್ಬುಕ್ಗಳಿಗೆ ದಾಟಿ ಯಾರನ್ನೂ ತಟ್ಟದೇ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇಪಕ್ಷ ಅಳಿದುಳಿದ ಶಿಲಾಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ಇಂಥ ಥ್ರಿಲ್ಲರ್ಗಳ ಅಗತ್ಯ ತುಂಬ ಇದೆ.- ನಾಗೇಶ ಹೆಗಡೆA Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ